Wednesday, November 15, 2023

ಇಂದು ನನ್ನ ಜನ್ಮ ದಿನ..

ಇಂದು ನನ್ನ ಜನ್ಮ ದಿನ.. 

ಹರಸಿದ  ಮನಗಳಿಗೆ ಕೋಟಿ ನಮನ. 

ಹಾಗೆ, ಓದಿ ತಿಳಿಸಿ ಈ ನನ್ನ ಲೇಖನ🙏🙏

ಮುಖಪುಟಕ್ಕೆ (ಪೇಸ್ಬುಕ್) ಬರುವುದಕ್ಕಿಂತ ಮುಂಚೆ ನನ್ನ ಜನ್ಮದಿನಾಚರಣೆ ಆಚರಣೆಯಲ್ಲಿ ಇರಲಿಲ್ಲ, ಅದು ಶಾಲಾ ಹೆಡ್ ಮಾಸ್ಟರ್ ಕೃಪಾ ಕಟಾಕ್ಷದಿಂದ ಶಾಲೆಯಲ್ಲಿ ದಾಖಲಾಗಿ, ಅದು ಕೆವಲ ಶಾಲಾ ಪ್ರಮಾಣ ಪತ್ರಗಳಲ್ಲಿ ಮಾತ್ರ ಸೀಮಿತವಾಗಿತ್ತು. 

ಏಕೆಂದರೆ ಎಲ್ಲರಿಗೂ ಜನ್ಮದಿನದ ಜ್ಞಾಪನ ಕಳಿಸಿ, ಜನ್ನ ದಿನಕ್ಕೆ ಶುಭಾಶಯಗಳು ತಿಳಿಸಲು ಅನುವು ಮಾಡಿಕೊಡುವುದೆ ಫೇಸ್ಬುಕ್ ಅಲ್ಲವೆ.. ಅದಕ್ಕೆ ನನ್ನ ಜನ್ಮದಿನದ ರಹಸ್ಯ ಕುರಿತು ಸ್ವಲ್ಪ ಬರೆಯೋಣ ಅಂತ.

 ಹಾಗೇ, ಸುಮ್ಮನೆ ಒಂದು ದಿನ  ನನ್ನವ್ವನ ಹತ್ತಿರ  ಕುಳಿತು ಜನ್ಮದಿನದ ರಹಸ್ಯ ಕೆದಕ ತೊಡಗಿದೆ. 

. "ಯವ್ವ ನಾ ಯಾವಾಗ ಹುಟ್ಟಿನಿ ಅಂತ ನಿನಗೆನರ ಗೊತ್ತಾದೇನು... ಎಲ್ಲರೆ ಚಿಟ್ಯಾಗ,,, ಗಿಟ್ಯಾಗ,,, ಬರದಿಟ್ಟಿರೇನು.. ಅಂದೆ" ... 

ಅದಕ್ಕವಳು... 

"ಇವಾಗಿನವರಂಗ ನಾವೆಲ್ಲಿ ಸ್ಯಾಣ್ಯಾರು, ಸಾಲಿ ಕಲತಿದ್ದರ ಬರದಿಡುತಿದ್ವಿಯೇನೊ.. ಅಂದವಳೇ ಎಲ್ಲವೂ ಹೇಳೋದಕ್ಕೆ ಪ್ರಾರಂಭಿಸಿದಳು. 

ಆಗ ಹೆಣ್ಣು ಮಕ್ಕಳಿಗಿ ಸಾಲಿ ಹಿಂದ ಸಹ ಹಾಯ್ಲಾಕ ಸ್ವಾತಂತ್ರ್ಯ ಇರಲಿಲ್ಲ ಎಲ್ಲಿಂದ ಸಾಲಿ ಕಲಿಯೋದು.. 

ನಮ್ ಅಪ್ಪಗ ನಾವು ಹದಿನಾಲ್ಕು ಮಂದಿ ಮಕ್ಕಳು. ಆಗಿನ ಕಾಲದಾಗ ಹೊಟ್ಟಿ ತುಂಬಿಸಿಕೊಳ್ಳೋದೆ ದೊಡ್ಡ ಕಷ್ಟ ಆಗಿತ್ತು. ಹೆಣ್ಣ ಮಕ್ಕಳ ಸಾಲಿ ಕಲಿತಿನಿ ಅಂದ್ರ ಆವಗಿನವರು ಮೂಗ್ ಮುರಿತಿದ್ರು ಅಂದ್ಳು.... 

ಇಗಿನ ಹೆಂಗಸರು  ಸಾಲಿ ಕಲಿತ ಬಾಳ ಸ್ಯಾಣ್ಯಾ ಇರತಾರ...  ಮಕ್ಳ ಹುಟ್ಟಾನ ದಿನ, ತಿಥಿ, ನಕ್ಷತ್ರ ಅಂತ ಎಲ್ಲವು ಬರ್ದಿದಿಡತಾರ.  ತಿಂಗಳಿಗಿ, ವರ್ಷಕ್ಕೊಮ್ಮಿ ಬಡ್ಡ್ಯಾ, ಗಿಡ್ಡ್ಯಾ ಅಂತ ಎನೇನೊ ಆಚರಣಿ ಮಾಡ್ತಾರ...  ನಾವೆಲ್ಲಿಂದ ಬರ್ದಿಡಮ್ಮ ಅದು ನಮಗೆ ಗೊತ್ತೇ ಇರಲಿಲ್ಲ ಅಂದ್ಳು,.. 

ನೀವ್ ಬರ್ದಿಟ್ಟಿದ್ದರ ಚೊಲೊ ಇರ್ತಿತ ನೋಡು, ಮಂದಿಯಂಗ ನಾನು  ಹುಟ್ಟಿದಬ್ಬ, ಗಿಟದಬ್ಬ  ಜೋರಗೆ ಮಾಡಕೊಳ್ಳಬಹುದಿತ್ತು ಎಂದು ತಮಾಸೆ ಮಾಡ್ದೆ... 

"ಕಣ್ಣಿದ್ದು ಕುರ್ಡರಪ್ಪ ನಾವು.   ಆಗ ಇವೆಲ್ಲ ಪರದೇಶಿ ಆಚರಣಿ ನಮಗೆಲ್ಲಿ ಗೊತ್ತದ್ವು..... ಅಮಾಸಿ, ಹುಣ್ಣಿಮಿ ನೋಡಿ ಹುಟ್ಟಿದ ದಿನ ಹೇಳುತ್ತಿದ್ದಿವಿ....  ಬಾಳಂದ್ರ ಹುಟ್ಟಿದ ಅಮಾಸಿ ದಿನ,  ತೆಲಿ ಎರ್ದು ಗುಡಿಗಿ ಕಳಿಸ್ತಿದ್ವಿ, ಅಂದ್ಳು" 

 " ಮಗ ನಿನಗ ಹಡಿಯುವ ದಿವಸ ಮುಂಚ್ಯಾ ಚಂತಾನ ಭಾವಿ ಹೊತ್ತ ಸಂಜಿಕ ಬ್ಯಾನಿ ತಿಂದು ಹಡದಿನಿ.. ಅವತ್ತ ನಮ್ಮ ತವರು ಮನೆಯವರು ಕುಭಸ ಮಾಡಾಕ ಬಂಡಿ ಹುಡ್ಕೋಂಡು ಊರಿಗಿ ಬಂದಿದ್ರು..  ಅವತ್ತೆ ನನಗ ಬ್ಯಾನಿ ಶುರುವಾಗಿದ್ವು... ನಿಮ್ ಮುತ್ಯಾ  ಸರ್ಕಾರಿ ದವಾಖಾನಿಗಿ ಕರ್ಕೊಂಡು ಹೋಗಿ ಅಲ್ಲೆ ಬಾಣೆತನನು ಮಾಡ್ಸುದರು. 

ಮತ್ ಕುಬ್ಸಾ ಹ್ಯಾಂಗ್ ಮಾಡಿದ್ರಿ ಬೇ,. ಎಂದು  ಕುತೂಹಲದಿಂದ ಕೇಳಿದೆ.

 "ಬಂದ ಮಂದಿ ಹಂಗ್ಯಾ ಹೊಗ್ಬಾರದಂತ ನಿಮ್ ಮುತ್ಯಾ ಅವತ್ತ  ಎನು ತಿಳಿಲಾರ್ದ ಸಣ್ಣ್  ಆಡೊ ಹುಡ್ಗಿಗಿ, ಯಮಮವ್ವ ಅನ್ನಾಕಿ  ಅವ್ರ ಅತ್ತಿ ಮಗ್ಳಿಗಿ  ನಿಮ್ಮಪ್ಪನ ಜೊತಿ ಕುಂಡ್ರಸಿ ಕುಬಸಾ ಮಾಡಿದರು". ಎಂದು ನಗುಮುಖದಿಂದ ಹೇಳಿದಳು, ಅವ್ಳ ಆ ಮುಗ್ದತೆ ಕಂಡು ನಗು  ಬಂತು. ಹೌದೇನು ಮುಂದೇನಾಯ್ತು. ಎಂದೆ. 

"ಚೊಛ್ಛಲ ಮಗ ನೀಯೊಬ್ಬ, ಮತ್ತ ಏಳರಾಗ ಹುಟ್ಟಿದ ನಿಮ್ ತಮ್ಮನೊಬ್ಬ  ಇಬ್ಬರೇ ನನಗ ಜಾಸ್ತಿ ತ್ರಾಸ್ ಕೊಡದೆ ಹುಟ್ಟದವರು... 

ಒಟ್ಟ್ ಒಂಬತ್ತ್ ಮಕ್ಳ ಹಡ್ದಿನಿ ನಾ, ಆದ್ರಗ ನಿಮ್ಮಿಬ್ಬರಿಗಿ ಬಿಟ್ರ ಒಂದು ಬದುಕಿಲ್ಲ. ಅವೆಲ್ಲ ಆರರಾಗ, ಎಂಟ್ರಾಗ ಹುಟ್ಟಿ ವಾತೊಂಬತ್ತು ದಿನ ಬದಕಿ ಸತ್ತ ಹೊಗತಿದ್ವು. ಕೆಲವು ಹೊಟ್ಟ್ಯಾಗ ಸತ್ತು ತರಾಸ ಮಾಡ್ತಿದ್ವು ಎಂದ್ಳು ದುಃಖ ದಿಂದ.....

ಈಗಿನಂಗ ಆವಾಗ ದವಾಖಾನಿ ಮುಂದಿರ್ಲಿಲ್ಲ.ದವಾಖಾನ್ಯಾಗ ಸಿಕ್ಕಂಗ ಹೊಟ್ಟಿ ಹಿಚಕ್ಯಾಡಿ ಅವು ತಗಿತಿದ್ರು. ಸತ್ ಹುಟ್ದಂಗ ಅಗತಿತ್ತು ಎಂದಾಗ.. ನಿಷ್ಕಲ್ಮಶವಿರದ ಮುಗ್ದ ಮನಸ್ಸಿನ ಮಾತು ಕೇಳಿ ಕಳ್ ಚುರ ಅಂದಂಗಾಗಿ, ಕಣ್ಣಲ್ಲಿ ನೀರ ಜಿನುಗಿತ್ತು.... 

ಕಣ್ ವರಸ್ಕೋತ, ಅ ದೇವರ ನಿನಗ ಬಾಳ ಅನ್ಯಾಯ ಮಾಡ್ಯಾನವ್ವ ಎಂದೆ.

ಮತ್ತೆ ಮುಗುಳ್ನಗು ತಂದು "ಇರಲಿ ಬಿಡು ಬೆ... ಇಗಿನವರು ಅಗಿದ್ದರ ಸತ್ತೆ ಹೊಗಿರ್ತಿದ್ರು. ಹಿಂದಕಿನ್ ಮಂದಿದು ಗಟ್ಟಿ ಜೀವ್, ಮೊದಲೆ ಜವಾರಿ ಮಂದಿ ಅಂತ ಅದ್ಕೆ ಬದುಕಿರಿ".. ಅಂತ ನಕ್ಕೋತ ಹೇಳಿದೆ.

 "ಮಗ ನೀ ಹುಟ್ಟಿದಾಗ, ದೀವಳ್ಗಿ ಅಮಾಸಿ ಇತ್ತು. ಆಗ ಗಟ್ಟಿಗಿತ್ತಿ ಇಂದ್ರವ್ವ ದೇಶಾ ಆಳ್ತಿದಳು. ನಮ್ಮೂರ ಕುಲಕಾಣ್ಯಾರ ಮಗಾನು ಅವತ್ತೆ ಹುಟ್ಟಿದ್ದ.. ಅವರೇನರೆ ಬರ್ದಿಟ್ಟಿರ ಬೇಕು, ಅವರ್ನ ಕೆಳಿದರ ಗೊತ್ತಾಗತಾದ" ಅಂದ್ಳು.... 

ಇರ್ಲಿ ಬಿಡು ನಮ್ಮ ಸಾಲಿ ಮಾಸ್ತಾರು ಎಲ್ಲಾ ಸಾಲ್ಯಾಗ  ಬರ್ದಿಟ್ಟಾರ. ಅವತ್ತೇ ಎಲ್ಲರೂ ನನಗ ಶುಭಾಶಯ ಹಾರೈಸತಾರ ನೀ ಚಿಂತಿಮಾಡ್ಬೇಡ.... ಎಂದು ನಗುತ್ತಾ ಸುಮ್ಮನಾದೆ.

ಅಮಾವಾಸಿ, ಹುಣ್ಣಿಮಿ ಲೆಕ್ಕ ಹಾಕಿ ದಿನಗಳ ಅಳೆಯೊ ಕಾಲದಾಗ. ಸಾಲಿ ಕಲಿದವರು ಅವರಾದ್ರು ಹೆಂಗ್ ಬರ್ದಿಟ್ಟಾರು. 

ನಮ್ಮದು ಕೂಡು ಕುಟುಂಬ. ಮಕ್ಕಳು ಸೇರಿ ಸುಮಾರು ಇಪ್ಪತ್ತು ಇಪ್ಪತೈದು ಜನ ಸದಸ್ಯರು ನಮ್ಮ ಮನ್ಯಾಗ. ಒಟ್ಟು ಹತ್ತು ಜನ ಮಕ್ಕಳಲ್ಲಿ ನಮ್ಮಪ್ಪನೆ ಮನಿಗಿ ಹಿರ್ಯಾವ. ಹಿಂಗಾಗಿ ಮನಿ ಜವಾಬ್ದಾರಿ  ನಮ್ಮಪ್ಪನ ಹೆಗಲಮ್ಯಾಲಿತ್ತು. 

ಆಗ ಊರಾಗ ಕೆಲಸ ಬ್ಯಾರೆ ಕಮ್ಮಿ ಇರುತ್ತಿದ್ವು. ಹೀಗಾಗಿ ನಮ್ಮವ್ವಗ ಕರ್ಕೋಂಡು ಮಹಾರಾಷ್ಟ್ರಕ್ಕೆ ದುಡ್ಡ್ಲಿಕೆ ಹೋಗುತ್ತಿದ್ದ.  ನಮ್ ಮುತ್ಯಾ.. ನನಗ, ಮನ್ಯಾಗ ಮಕ್ಕಳ ಜೊತಿ ಅಡಕೋತ ಸಾಲಿ ಕಲಕೋತ ಇರಲಿ ಅಂತ ನನ್ನ ಅವರ ಜೊತಿ ಕಳ್ಸತಿರಲಿಲ್ಲ. ಹೀಗಾಗಿ ನಮ್ಮ ಅಪ್ಪ ಅವ್ವನ ಜೊತೆ ಇರುವುದಕ್ಕಿಂತ ಅತ್ತೆ, ಮತ್ತು ಚಿಕ್ಕಪ್ಪಂದಿರ ಜೊತೆ ಬೆಳೆದಿದ್ದು ಹೆಚ್ಚು.

 ಕೈ ತಿರಗಿಸಿ, ಜೊಗ್ಗಿ ಹಚ್ಚಿದದ್ರು ಕಿವಿಗೆ ಬಾರದ ವಯಸ್ಸಿನ್ಯಾಗ ನಮ್ಮ  ಚಿಕ್ಕಪ್ಪ(ಕಾಕಾ)ರ ಜೊತಿ ನನಗೂ ಶಾಲೆಗೆ ಹೆಸರ ಹಚ್ಚದಾ ನಮ್ ಮುತ್ಯಾ..  ಹೆಡ್ ಮಾಸ್ಟರ್ ಜನ್ಮ ದಿನಾಂಕ ಕೇಳಿದಾಗ ದೀಪಾವಳಿ ಸುತ್ತಾ ಮುತ್ತಾ ಹುಟ್ಯಾನ್ರೀ.. ಎಂದು ಹೇಳಿರ ಬೇಕು.. ಅದಕ ನನ್ನ ಜನ್ಮ ದಿನಾಂಕ ನವಂಬರ್ ತಿಂಗಳಲ್ಲಿ ಬಂದಿರಬಹುದು. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಹೆಡ್ ಮಾಸ್ಟರ್ಗಳು ಜೂನ್ ತಿಂಗಳಲ್ಲಿ ಹೆಚ್ಚು ಹೆಸರುಗಳು ನಮೂದಿಸಿರುವದೆ ಜಾಸ್ತಿ. 

ನಮ್ ಮುತ್ಯಾ.. ದೀಪಾವಳಿ ಸುತ್ತಾ ಮುತ್ತ ಅಂದಿದ್ದಕ ಇರಬಹುದೇನೊ. ದೀಪಾವಳಿ ಅಮಾವಾಸ್ಯೆ ಬರುವುದು ಸಾಮಾನ್ಯವಾಗಿ ನವಂಬರ್ ತಿಂಗಳಲ್ಲಿ. ಇದ್ನ ಲೆಕ್ಕಾ ಹಾಕಿ ಹೆಡ್ ಮಾಸ್ಟರ್ಗಳು ನವಂಬರ್ 15 ಎಂದು ದಾಖಲು ಮಾಡಿರಬೇಕು ಅನಿದುತ್ತದೆ.

ಅದೇನೇ ಇರಲಿ, ನನಗೆ ಜನ್ಮ ನೀಡಿದ್ದು ನನ್ನ ತಂದೆ ತಾಯಿಯಾದರೆ. ಹುಟ್ಟಿದಬ್ಬ ಆಚರಿಸಿಕೊಳ್ಳಲು ಒಂದು ಪ್ರಮಾಣ ಪತ್ರದಲ್ಲಿ ಜನ್ಮದಿನವನ್ನು ನೀಡಿದ್ದು ನಮ್ಮ ಹೆಡ್ ಮಾಸ್ಟ್ರುಗಳೇ...

ಅದುವೆ ಮುಂದೆ ಎಲ್ಲಾ ಪ್ರಮಾಣ ಪತ್ರಗಳಲ್ಲಿ ದಾಖಲಾಗಿ. ಅದೇ ನನ್ನ ಜನ್ಮ ದಿನವಾಗಿ ಇಂದಿನವರೆಗೂ ಆಚರಣೆ ನಡೆಯುತ್ತಲೇ ಇದೆ... ನನ್ನ ಪ್ರೀತಿಯ ಮಡದಿಯು ಕೂಡ ಪ್ರತಿ ವರ್ಷ ಇದೇ ದಿನ ನನ್ನ ಹುಟ್ದಬ್ಬಕ್ಕೆಂದು ಹಣ ಕೂಡಿಟ್ಡು, ಹೊಸ ಬಟ್ಟೆಯೊಂದಿಗೆ ಮತ್ತೇನರೆ ಉಡುಗೊರೆಯು ಸಹ ಕೊಡಿಸತ್ತಾಳೆ. ನನ್ನ ಮಕ್ಕಳು ಸಿಹಿ ತಿನಿಸಿ ಶುಭಾಶಯಗಳು ಕೋರಿದಾಗ ಬಾಳು ಸಾರ್ಥಕ ಎನಿಸುತ್ತದೆ. 

ಪ್ರತಿ ವರ್ಷವೂ ಮುಖಪುಟ (ಫೇಸ್ಬುಕ್) ಎಲ್ಲರಿಗೂ ಜ್ಞಾಪಿಸುತಿದ್ದಂತೆ.  ಸ್ನೇಹಿತರು ಬಂಧು ಬಾಂಧವರು ಶುಭಾಶಯಗಳ ಸುರಿ ಮಳೆಗಳೇ ಸುರಿಸಿ, ಫೇಸ್ಬುಕ್ ವಾಟ್ಸಪ್ ತುಂಬಿ ಬಿಡುತ್ತಾರೆ. 

ಎಷ್ಟೋ..! ಜನ ಆತ್ಮೀಯರು, ನನ್ನ ಮುದ್ದು ವಿದ್ಯಾರ್ಥಿನಿಯರು ನನ್ನ ಭಾವಚಿತ್ರವನ್ನು ತಮ್ಮ ವಾಟ್ಸಪ್ ಅಂತಸ್ತಿಗೆ ಇಟ್ಟುಕೊಂಡು ಅಭಿಮಾನತೋರಿ ಅಭಿನಂದಿಸುತ್ತಾರೆ. ಸ್ನೇಹಿತರು ಪಾರ್ಟಿ ಬೇಡಿ ಚುಡಾಯಿಸುತ್ತಾರೆ. ಇದೆಲ್ಲ ನೋಡಿದಾಗ ಖುಷಿಯಿಂದ ಮನದುಂಬಿ ಅಭಿನಂದಿಸಿದವರಿಗೆ ಪುನಃ ಧನ್ಯವಾದಗಳು ಕೂಡ ತಿಳಿಸಲು ಮುಂದಾಗುತ್ತೇನೆ.

ನನ್ನ ಜನ್ಮ ದಿನಕ್ಕೆ ಶುಭಾಶಯ ಕೋರಿದ ಎಲ್ಲಾ ಆತ್ಮೀಯರಿಗೂ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು

◼ ಶ್ರೀ ಬಸವರಾಜ  ಭೂತಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು

School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...